ಯಕ್ಷ ಮುಖವರ್ಣಿಕೆಯಲ್ಲಿ ಸಂಭ್ರಮಿಸಿದ ಕೊರಗ ಮಕ್ಕಳು
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಒಕ್ಟೋಬರ್ 22 , 2013
|
ಒಕ್ಟೋಬರ್ 22 , 2013
|
ಯಕ್ಷ ಮುಖವರ್ಣಿಕೆಯಲ್ಲಿ ಸಂಭ್ರಮಿಸಿದ ಕೊರಗ ಮಕ್ಕಳು
ಕುಂದಾಪುರ :
ಯಕ್ಷಗಾನ ಕೊರಗ ಸಮುದಾಯದಿಂದ ಬಹು ದೂರವೇ ಉಳಿದಿದೆ. ಕೊರಗ ಸಮುದಾಯದವರು ಯಕ್ಷಗಾನ ಕ್ಷೇತ್ರದಲ್ಲೂ ಬಹಳ ವಿರಳ. ಆದರೀಗ ಈ ಸಮುದಾಯ ಮೊದಲ ಬಾರಿಗೆ ಯಕ್ಷಗಾನದ ಮುಖವರ್ಣಿಕೆಯ ಅನುಭವ ಪಡೆದು ಹರ್ಷಚಿತ್ತರಾದ ನೋಟ ಶನಿವಾರ ಕುಂಭಾಸಿಯಲ್ಲಿ ಕಂಡುಬಂತು.
ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಮಿತಿ ಹಾಗೂ ಐಟಿಡಿಪಿ ಉಡುಪಿ ಕೊರಗ ಮಕ್ಕಳಿಗಾಗಿ ಕುಂಭಾಸಿಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ ವಿಶೇಷ ಶಿಬಿರ ಮಾತಾಡು-2013ರ ಭಾಗವಾಗಿ ಯಕ್ಷಗಾನ ಮುಖವರ್ಣಿಕೆಯ ಪ್ರಾತ್ಯಕ್ಷಿಕೆ ನಡೆಯಿತು.
ಭಾಸ್ಕರ ನಡೂರು ಶಿಬಿರದಲ್ಲಿ ಭಾಗವಹಿಸಿರುವ ಕೊರಗ ಮಕ್ಕಳಿಗೆ ಯಕ್ಷಗಾನದ ವೇಷಗಳಿಗೆ ಒಪ್ಪುವ ಬಣ್ಣಗಾರಿಕೆ ತೋರಿಸಿಕೊಟ್ಟಿದ್ದಲ್ಲದೆ ಮಕ್ಕಳ ಮುಖಕ್ಕೆ ಬಣ್ಣ ಬಿಡಿಸಿದರು. ಹನುಮ, ರಕ್ಕಸ, ಸ್ತ್ರೀವೇಷ, ಪುರುಷ ವೇಷ ಹೀಗೆ ನಾನಾ ಪ್ರಕಾರದ ಬಣ್ಣಗಾರಿಕೆಯ ಸ್ವಾನುಭವ ಪಡೆದ ಮಕ್ಕಳು ಸಂತೋಷದಿಂದ ಕುಣಿದಾಡಿದರು. ಯಕ್ಷಗಾನ ಕಲಾವಿದ ಶ್ರೀಧರ ಉಪ್ಪುಂದ ಪ್ರಾತ್ಯಕ್ಷಿಕೆಯಲ್ಲಿ ಸಹಕರಿಸಿದರು.
ಕೊರಗ ಸಮುದಾಯದವರು ಯಕ್ಷಗಾನ ರಂಗ ಪ್ರವೇಶಿಸಿದ್ದೇ ಇಲ್ಲ ಅಂತನಿಸುತ್ತಿದೆ. ಕೊನೆ ಪಕ್ಷ ಯಕ್ಷಗಾನದ ವೈಭವಪೂರಿತ ಬಣ್ಣಗಾರಿಕೆಯ ಅನುಭವ ಪಡೆದುಕೊಂಡಿರುವುದು ಜೀವನದಲ್ಲಿ ಎಂದಿಗೂ ಮರೆಯಲಾಗದ ಘಟನೆ. ಬಣ್ಣಗಾರಿಕೆ ನಡೆಸಿಕೊಟ್ಟವರು ಸಹ ಧನ್ಯತಾಭಾವ ಪಡೆದರು. ಸಮುದಾಯದ ಮಕ್ಕಳು ಯಕ್ಷಗಾನದ ಇತರೆ ಪ್ರಕಾರಗಳ ಅನುಭವ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು. - ಗಣೇಶ್ ಬಾರ್ಕೂರು, ಶಿಬಿರಾಧಿಕಾರಿ
ಕೃಪೆ : http://vijaykarnataka.indiatimes.com/
|
|
|